Kannada Journalists

ಇದು ಮಾಧ್ಯಮ ಮಿತ್ರರ ಸಮೂಹ ಮಾಧ್ಯಮ

ಶ್ರೀ

ಕೋಮುಗಲಭೆ ಮತ್ತು ಮಾಧ್ಯಮ

ಕೋಮುಗಲಭೆಯ ಸಮಯ ವರದಿಗಾರಿಕೆ ಹೇಗಿರಬೇಕು ಅಂತ ಒಂದಿಷ್ಟು ನಿಯಮಾವಳಿಗಳು ಪತ್ರಿಕೋದ್ಯಮದಲ್ಲಿ ತಾತ್ವಿಕವಾಗಿ ಜಾರಿಯಲ್ಲಿವೆ, ಯೂನಿವರ್ಸಿಟಿಗಳಲ್ಲಿ ಕಲಿಸುತ್ತಿದ್ದರು. ಇವುಗಳ ಪಾಲನೆ ಆಗದಿರುವುದೇ ಹೆಚ್ಚು ಎನ್ನಬಹುದಾದರೂ, ಪಾಲನೆ ಆದಂತಹ ಹಲವಾರು ಉದಾಹರಣೆಗಳು ನಮ್ಮ ಕಣ್ಣಮುಂದಿವೆ. ಇವುಗಳಲ್ಲಿ ನನಗಿಷ್ಟವಾದ ಕೆಲವು ಉದಾಹರಣೆಗಳು -

1) ಆದಿನ - ಡಿಸೆಂಬರ್ 10, 2008. ಭಯೋತ್ಪಾದಕ ದಾಳಿಯ ರಕ್ಷಣಾಕಾರ್ಯಗಳು ಮುಗಿದು 10 ದಿನವಷ್ಟೇ ಆಗಿತ್ತು. ಮಥುರಾದಿಂದ ಯಾತ್ರಿಗಳನ್ನು ಹೊತ್ತು ವಾಪಸ್ ವೇಗವಾಗಿ ಬರುತ್ತಿದ್ದ ಬಸ್-ಗೆ ಆಕಸ್ಮಿಕವಾಗಿ ಬೆಂಕಿ ಹತ್ತಿ 40ಕ್ಕೂ ಹೆಚ್ಚು ಮಂದಿ ದಾರುಣವಾಗಿ ಮರಣಕ್ಕೊಳಗಾದರು. ಆಜ್-ತಕ್ ಎರಡು ಸಲ ಉತ್ತರಪ್ರದೇಶದಲ್ಲಿ ಹೀಗಾಗಿದೆ ಎಂದು ಫ್ಲಾಶ್ ನ್ಯೂಸ್ ಕೊಟ್ಟಿತು. ಕನ್ನಡದ ಚಾನೆಲ್ಲುಗಳಲ್ಲಿ ಟಿವಿ9ನಲ್ಲಿ ಕೂಡ ಕೆಲಬಾರಿ ಈ ಸುದ್ದಿ ಫ್ಲಾಶ್ ಆಗಿ ಬಂತು. ಇಂಗ್ಲಿಶ್ ಚಾನೆಲ್-ಗಳಲ್ಲಿ ಸಿಎನ್ಎನ್ ಐಬಿಎನ್ ನಲ್ಲಿ ಕೆಲ ಬಾರಿ ಫ್ಲಾಶ್ ಆಯಿತು. ಆದರೆ, ನಂತರ ಸುದ್ದಿಯ ವಿವರಗಳನ್ನು ಪುಟ್ಟದಾಗಿ ಹೇಳಿ ಮುಗಿಸಿ ಬಿಟ್ಟರು. ಯಾವುದೇ ಚಾನೆಲ್ ಕೂಡ ಇದನ್ನು ಮಹತ್ವದ ಸುದ್ದಿಯೆಂಬಂತೆ ಬಿಂಬಿಸಲಿಲ್ಲ. ಮರುದಿನ ಪತ್ರಿಕೆಗಳಲ್ಲಿ ನೋಡಿದರೆ ಕನ್ನಡಪ್ರಭಾದಲ್ಲಿ ಒಳಗಿನ ಪುಟದಲ್ಲೆಲ್ಲೋ ಸುದ್ದಿ ಕಾಣಿಸಿತು. ಇತರ ಪತ್ರಿಕೆಗಳಲ್ಲಿ ಗಮನ ಸೆಳೆಯುವಷ್ಟು ದೊಡ್ಡದಾಗಿ ಇರಲಿಲ್ಲ.
ಒಂದು ವೇಳೆ ಈ ಸುದ್ದಿ ದೊಡ್ಡದಾಗಿದ್ದರೆ ಅದರ ರಾಜಕೀಯ ಲಾಭ ಪಡೆಯಲು, ಹಿಂಸೆ ಹರಡಲು ಮಂದಿ ಕ್ಯೂನಲ್ಲಿ ನಿಂತಿರುತ್ತಿದ್ದರು ಎಂಬುದಂತೂ ಅಪ್ಪಟ ಸತ್ಯ. ಹಾಗೇನಾದರೂ ಆಗಿದ್ದಿದ್ದರೆ ಮತ್ತೆ ಇದು ದೇಶ ನಾಚಿಕೊಳ್ಳುವ ಘಟನೆಯಾಗಿ ಬದಲಾಗಿರುತ್ತಿತ್ತೇನೋ, ಕಾಲಘಟ್ಟವೂ ಹಾಗೇ ಇತ್ತು. (ಗೋಧ್ರಾ ಘಟನೆಯಲ್ಲಿಯೂ ಹೀಗೆಯೇ ಆಗಿತ್ತು, ಬೋಗಿಗೆ ಬೆಂಕಿ ಬಿದ್ದು ಭಕ್ತರು ಸಾಯುವ ಮೂಲಕವೇ ಗೋಧ್ರಾ ಹಿಂಸಾಚಾರ ಆರಂಭವಾಗಿತ್ತು. ಆಗ ಸುದ್ದಿಮಾಧ್ಯಮಗಳು ಹುಷಾರಾಗಿದ್ದಿದ್ದರೆ ಕಥೆಯೇ ಬೇರೆಯಿರುತ್ತಿತ್ತು)

2) ಬೆಳಗಾವಿಯ ಹುಕ್ಕೇರಿ - ಮಾರ್ಚ್ 19, 2009. ಗ್ರಾಮದೇವಿಯ ಮೆರವಣಿಗೆಗಾಗಿ 40,000ಕ್ಕೂ ಹೆಚ್ಚು ಜನ ಸೇರಿದ ಸಂದರ್ಭ, ಎಲ್ಲಿಂದಲೋ ಒಂದು ಕಲ್ಲು ಬಿತ್ತು. ಅಷ್ಟೆ, ಕಿಡಿ ಹೊತ್ತಿಕೊಂಡಿತು, ಘರ್ಷಣೆ ಆರಂಭವಾಯಿತು. ಒಂದು ಕೋಮಿಗೆ ಸೇರಿದ ಅಂಗಡಿಗಳನ್ನು ಮತ್ತು ಪ್ರಾರ್ಥನಾ ಮಂದಿರಗಳಿಗೆ ಹುಡುಕಿ ಹುಡುಕಿ ಬೆಂಕಿಯಿಟ್ಟರು. ಹೆಂಗಸರು ಮತ್ತು ಮಕ್ಕಳು ಮಾತ್ರವಿದ್ದ ಮನೆಗೆ ಮುಸುಕುಧಾರಿಗಳು ಬೆಂಕಿಯಿಟ್ಟರು. ಇದನ್ನು ಚಿತ್ರೀಕರಿಸುತ್ತಿದ್ದ ಬೆರಳೆಣಿಕೆಯ ಮಾಧ್ಯಮ ವರದಿಗಾರರಿಗೆ ಮತ್ತು ಕ್ಯಾಮರಾಮನ್-ಗಳಿಗೆ ಕೂಡ ಬೆದರಿಕೆ ಬಂತು. ಘಟನಾಸ್ಥಳದಲ್ಲಿ ಪೊಲೀಸರಿದ್ದರೂ ಕೂಡ ಏನೂ ಮಾಡಲಾರದವರಾಗಿದ್ದರು. ಕೊನೆಗೆ ಮಾಧ್ಯಮದವರೇ ಬೆಂಕಿ ಹತ್ತಿದ ಮನೆಯಿಂದ ಹೆಂಗಸರು ಮತ್ತು ಮಕ್ಕಳನ್ನು ಉಳಿಸಿದರು. ಬೆಂಕಿಯಲ್ಲಿ ಒಟ್ಟು 30 ಲಕ್ಷಕ್ಕೂ ಹೆಚ್ಚು ಹಾನಿಯಾಗಿತ್ತು. ಜೀವಹಾನಿಯಾಗಿರಲಿಲ್ಲವೆಂಬುದು ಮಾತ್ರ ಪ್ಲಸ್ ಪಾಯಿಂಟ್.
ಇವೆಲ್ಲದಕ್ಕೆ ದೃಶ್ಯಸಮೇತ ಸಾಕ್ಷಿಯಿದ್ದರೂ ಈ ಘಟನೆ ದೃಶ್ಯಮಾಧ್ಯಮಗಳಲ್ಲಿ 'ಹೈಪ್' ಆಗಲಿಲ್ಲ. ಜತೆಗೆ ರಾಷ್ಟ್ರೀಯ ಚಾನೆಲ್-ಗಳಿಗೆ ವೀಡಿಯೋ ಕೊಡುವಂತಹ ಸ್ಟ್ರಿಂಜರ್-ಗಳು ಅಥವಾ ಹವ್ಯಾಸಿಗಳೂ ಅಲ್ಲಿರಲಿಲ್ಲವೇನೋ. ಹಾಗಾಗಿ ಇದು ರಾಷ್ಟ್ರೀಯ ಸುದ್ದಿಯಾಗಲಿಲ್ಲ. ಪರಿಣಾಮವಾಗಿ, ಹಿಂಸೆ ಇತರೆಡೆಗೆ ಹರಡಲಿಲ್ಲ. ಒಂದು ಉತ್ತಮ ಎಡಿಟೋರಿಯಲ್ ಜಡ್ಜ್-ಮೆಂಟಿಗೆ ಉದಾಹರಣೆಯಾಗಿ ಇದನ್ನು ನಾನು ಆಗಾಗ ನೆನಪಿಸಿಕೊಳ್ಳುತ್ತಿರುತ್ತೇನೆ.

3) ಮೈಸೂರು - ಜುಲೈ 2, 2009. ಬೆಳಿಗ್ಗೆ 10.30ರ ಹೊತ್ತಿಗೆ ಕೋಮುಗಲಭೆಯಾಗುತ್ತಿರುವುದು ಗೊತ್ತಾಗಿತ್ತಾದರೂ ಮಧ್ಯಾಹ್ನದ ವರೆಗೆ ಕನ್ನಡದ ಯಾವುದೇ ಚಾನೆಲ್ ಸುದ್ದಿಯನ್ನು ಪ್ರಸಾರ ಮಾಡಲಿಲ್ಲ. ಆದರೆ ಸಿ ಎನ್ ಎನ್ ಐಬಿಎನ್ ಮತ್ತು ಎನ್ ಡಿ ಟೀವಿಗಳಿಗೆ ವೀಡಿಯೋ ಸಿಕ್ಕಿ 12.30ರ ಸುಮಾರಿಗೆ ಸುದ್ದಿ ಪ್ರಸಾರ ಮಾಡಿದ್ದವು. ಆದರೆ ಕರ್ನಾಟಕದಲ್ಲಿ ಹಿಂಸೆ ಹರಡಲಿಲ್ಲ, ಯಾಕೆಂದರೆ ಸುದ್ದಿ ಎಲ್ಲಿಯೂ 'ಹೈಪ್' ಆಗಲಿಲ್ಲ. ಈನಿಟ್ಟಿನಲ್ಲಿ ಕನ್ನಡದ ಸುದ್ದಿವಾಹಿನಿಗಳನ್ನು, ಮುಖ್ಯವಾಗಿ ಟಿವಿ9 ವಾಹಿನಿಯ ನಿರ್ಧಾರವನ್ನು ಅಭಿನಂದಿಸಲೇಬೇಕು. ಇಂಥಾ ಸಮಯ ಎಲ್ಲರೂ ಸುದ್ದಿವಾಹಿನಿಗಳಲ್ಲಿ ಏನು ಬರುತ್ತದೆ ಅಂತ ಕಾಯುತ್ತಿರುತ್ತಾರೆ. ಅಲ್ಲಿಯೇನಾದರೂ ದೊಡ್ಡದಾಗಿ ಕಾಣಿಸಿತೋ, ಕಥೆ ಮುಗಿಯಿತೆಂದೇ ಅರ್ಥ. ಈಟಿವಿ, ಕಸ್ತೂರಿ, ಉದಯ ಮುಂತಾದವರು ಸುದ್ದಿ ಕೊಟ್ಟರೂ ಅದು ವೀಕ್ಷಕರಿಗೆ ಲೆಕ್ಕಕ್ಕಿಲ್ಲ ಎಂಬುದು ಸಮಾಧಾನದ ವಿಷಯ. (ಈ ವಿಚಾರದಲ್ಲಿ ಮಾತ್ರ :-) )

ಮೈಸೂರು ಗಲಭೆಯ ಸಮಯ ಲಾಭ ಪಡೆಯಲೆತ್ನಿಸಿದವರ ಬಗ್ಗೆ ಕಸ್ತೂರಿ ವರದಿಗಾರ ಮಹೇಶ್ ತಮ್ಮ ಬ್ಲಾಗಲ್ಲಿ ಬರೆದುಕೊಂಡಿದ್ದಾರೆ - ಓದಲು ಇಲ್ಲಿ ಭೇಟಿ ನೀಡಿ.

Tags: communalviolence, media, politics

Share 

Add a Comment

You need to be a member of Kannada Journalists to add comments!

Join this Ning Network

venu vinod Comment by venu vinod on July 15, 2009 at 8:44pm
ಮಂಗಳೂರಿನಲ್ಲಿ ನಡೆದ ಕೋಮುಗಲಭೆ(ಇತ್ತೀಚಿಗಿನವು)ಗಳು ಹರಡುವುದರಲ್ಲಿ ಮಾಧ್ಯಮಗಳು ಮತ್ತು ಮೊಬೈಲ್ ಪಾತ್ರ ಪ್ರಮುಖ. ಪೈಪೋಟಿಗೆ ಬಿದ್ದು ಮಾಧ್ಯಮಗಳು ಸುದ್ದಿ ಕೊಟ್ಟವು. ಇಂತಹ ಸಂದರ್ಭಗಳಲ್ಲಿ ಮೃತರಾಗುವವರ, ಗಾಯಾಳುಗಳ ಹೆಸರು ಪ್ರಕಟಿಸುವುದು ಸೂಕ್ತವಲ್ಲ ಎನ್ನುವುದು ನನ್ನ ಅನಿಸಿಕೆ, ಆದರೆ ಪೈಪೋಟಿಯಿಂದಾಗಿ ಅನೇಕ ಅಪ್ರಿಯ ಸತ್ಯಗಳನ್ನೂ ಮಾಧ್ಯಮಗಳು ಪ್ರಕಟಿಸಿದವು. ಇದಕ್ಕಿಂತ ಆಘಾತಕಾರಿ ಎಂದರೆ ಮೊಬೈಲ್ ದುರುಪಯೋಗ. ಕೋಮುಗಲಭೆ ಸಂದರ್ಭ ಪರಸ್ಪರ ರೂಮರ್ ಹಬ್ಬಿಸುವುದಕ್ಕೇ ಮೊಬೈಲ್ ಬಳಕೆ ಹೆಚ್ಚಾಯಿತು. ಪತ್ರಿಕಾ ಕಚೇರಿಗೇ ಅದೆಷ್ಟೋ ಗಾಳಿಸುದ್ದಿಗಳು ಹಾರಿ ಬರುತ್ತವೆ. ತಡರಾತ್ರಿಯಲ್ಲಿ ಬರುವ ಅಂತಹ ರೂಮರ್ ದೃಢಪಡಿಸುವುದೂ ಸವಾಲೇ.
ಮಂಗಳೂರಿನಲ್ಲಿ ಬಹಳಷ್ಟು ಬಾರಿ ಸ್ಥಳೀಯ ಮಾಧ್ಯಮಗಳು, ರಾಜ್ಯಮಟ್ಟದ ಮಾಧ್ಯಮಗಳು ತಾಳ್ಮೆ ವಹಿಸಿದರೂ ಹೊರಗಿನಿಂದ ಬಂದು ಬೆಂಕಿ ಹಚ್ಚಿ ಹೋಗುವುದಕ್ಕೇ ಕೆಲವು ಸೋಕಾಲ್ಡ್ 'ರಾಷ್ಟ್ರೀಯ' ಮಾಧ್ಯಮ ಪ್ರತಿನಿಧಿಗಳಿರುವುದು ಮಾತ್ರ ದುರದೃಷ್ಟ
Arkalgud Jayakumar.C., Comment by Arkalgud Jayakumar.C., on July 12, 2009 at 4:32pm
ಶ್ರೀ ಯವರೇ ಸರಿಯಾದ ಸಮಯದಲ್ಲಿ ವಿಷಯವನ್ನು ಚರ್ಚೆಗೆ ತಂದಿದ್ದೀರಿ, ಪತ್ರಿಕೋಧ್ಯಮಕ್ಕೆ ಕಾಲಿರಿಸುವ ಬಹುತೇಕರಿಗೆ ಸುದ್ದಿ ಜಗತ್ತಿನ ಆಳದ ಅರಿವು, ವಾಸ್ತವ ನೆಲೆಗಟ್ಟಿನ ಚಿಂತೆಯಾಗಲಿ ಇರುವುದಿಲ್ಲ. ಆನೆ ನಡೆದಿದ್ದೇ ಹಾದಿ ಎಂಬ ಮಾತಿದೆಯಲ್ಲ ಆ ರೀತಿ ಪತ್ರಕರ್ತರು ನಡೆದು ಕೊಂಡರೆ ತಪ್ಪಾಗುತ್ತೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಸುದ್ದಿಗಳ ಬಗ್ಗೆ ಒಂದು ಗಾಂಭೀರ್ಯತೆ ಇರಿಸಿಕೊಳ್ಳಬೇಕಾಗುತ್ತೆ. ಈ ಬಗ್ಗೆ ಕಾರ್ಯಗಾರಗಳು ನಡೆಯಬೇಕು, ಹಿರಿಯ ಪತ್ರಕರ್ತರು ನಿಯಂತ್ರಣ ಇರಿಸಿಕೊಳ್ಳಬೇಕು ಅದು ಅನಿವಾರ್ಯ ಸಹಾ. ಇನ್ನು ಮಿತ್ರ ಶ್ರೀನಿವಾಸ ಗೌಡರು ಮಂಗಳೂರು-ಬೆಂಗಳೂರಿನ ತರಹ ಕೋಮು ಗಲಭೆಗಳ ನೆರಳು ಮೈಸೂರಿಗೆ ತಲುಪಿಲ್ಲ ಎಂದಿದ್ದಾರೆ, ಅದು ಸರಿಯಲ್ಲ. ಬಹುಶ: ಅವರಿಗೆ ತಿಳಿದಿರಲಾರದು, ಅದು 83-84ರ ವರ್ಷವಿರಬಹುದು, ಅದೊಂದು ದಿನ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಭಾನುವಾರದ ಪುರವಣಿಯಲ್ಲಿ ಪ್ರಕಟವಾದ ವ್ಯಂಗ್ಯ ಚಿತ್ರವೊಂದರಿಂದ ಕ್ರದ್ದರಾದ ಕೆಲವರು(!) ದೊಡ್ಡ ಕೋಮುಗಲಭೆಯನ್ನೇ ಸೃಷ್ಟಿಸಿದ್ದರು, ಪತ್ರಿಕೆಯ ಕಛೇರಿಗೆ ನುಗ್ಗಿ ಹಲ್ಲೆ ಮಾಡಿದರು, ಪ್ರತಿಗಳನ್ನು ಸುಟ್ಟರು, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಬೆಂಕಿ ಇಟ್ಟು ದೊಡ್ಡ ಗಲಭೆ ಸೃಷ್ಟಿಯಾಗಿತ್ತು. ಇಡೀ ಪರಿಸ್ಥಿತಿ ನಿಯಂತ್ರಣಕ್ಕೆ ಬರಲು 5-6ದಿನಗಳೇ ಹಿಡಿದಿತ್ತು. ಪರಿಣಾಮ ಡೆಕ್ಕನ್ ಹೆರಾಲ್ಡ್-ಪ್ರಜಾವಾಣಿ ಪತ್ರಿಕೆಗಳ ಪ್ರಕಟಣೆ ಕೆಲಕಾಲ ಸ್ಥಗಿತವಾಗಿತ್ತು. ಸಧ್ಯ ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಗಲಭೆ ಇರಲಿಲ್ಲ. ಆದರೂ ಕಳೆದ ಒಂದು ದಶಕದಲ್ಲಿ ಅಲ್ಲಿನ ಜನರ ಮಧ್ಯೆ ಸೇರ್ಪಡೆಯಾಗುತ್ತಿರುವ ದೇಶದ್ರೋಹಿಗಳು, ನಿಷೇಧಿತ ಸಂಘಟನೆಯ ಮಂದಿ, ಕ್ರಿಕೆಟ್ ನೆಪದಲ್ಲಿ ಬಂದ ಸಾವಿರಾರು ಮಂದಿಯ ಬಹುತೇಕರು ಬಂದು ಉಳಿದಿರುವುದು ಮೈಸೂರಿನಲ್ಲಿ ಎಂಬುದು ಮಾತ್ರ ಕಹಿ ಸತ್ಯ. ಒಳ್ಲೆ ವಿಚಾರ ಕೊಟ್ಟಿದ್ದಕ್ಕೆ ಶ್ರೀದೇವಿ ಕಳಸದ್ ರವರಿಗೆ ಧನ್ಯವಾದಗಳು.
srinivasagowda Comment by srinivasagowda on July 12, 2009 at 12:16pm
ಕೋಮುಗಲಭೆ ಸೃಷ್ಠಿಯಾಗೋದೇ ಅಪಾಯಕಾರಿ ಮನಸುಗಳ ದುರುಳ ಬುದ್ದಿಯಿಂದ,ಬೆಂಗಳೂರಿನಲ್ಲಿ ಕಳೆದ ವರ್ಷ ಮಸೀದಿಯೊಂದಕ್ಕೆ ಯಾವುದೋ ಪ್ರಾಣಿಯ ಮಾಂಸ ಎಸೆದಿದ್ದಾರೆ ಅಂತ ಆರ್.ಟಿ.ನಗರದ ಕಡೆ ದಿಡೀರ್ ಅಂತ ಗಲಾಟೆ ಹತ್ತಿಕೊಂಡಿತ್ತು, ನಾವು ರೀಜಿನಲ್ ಮೀಡಿಯಾದವರು ಹೋಗೋಕೆ ಮುಂಚೆ ಸೋ ಕಾಲ್ಟ್ ನ್ಯಾಷನಲ್ ಮೀಡಿಯಾದವರು ಇದ್ರು.. ಬ್ರೇಕಿಂಗ್, ಎಕ್ಸ್ ಕ್ಲೂಸಿವ್ ಅಂತ ಹಾಕಿ ಇಡಿ ಬೆಂಗಳೂರನ್ನ ಹೆದರಿಸಿದ್ರೂ..ಆಗ ಸಮಯ ಇನ್ನೇನು ಸ್ಕೂಲು ಬಿಡೋ ಹೊತ್ತು, ಆಪೀಸಿಂದ ಜನ ಬರೋ ಹೊತ್ತು ಜನ ಗಾಭರಿ ಬಿದ್ದೋದರು ಬಾಯಿಂದ ಬಾಯಿಗೆ ಹರಡಿದ ಸುದ್ದಿ ಕೆಲನಿಮಿಷಗಳಲ್ಲಿ ಬೆಂಗಳೂರನ್ನೇ ಹರಡಿತ್ತು, ಗಲಾಟೆ ನಡೆದಿದ್ದು ಯಾವುದೋ ಕೊಂಪೆಯಲ್ಲಾದರು ಬೇರೆ ಬೇರೆ ಏರಿಯಾದವರೂ ಹೆದರಿದರು,
ಪಾಪ ತಾಯಂದಿರು, ಹೆಂಗಸರು, ಅಮಾಯಕರು ಹೊರಬರಲಿಕ್ಕೆ ಹೆದರಿದರು. ಮಕ್ಕಳು ವಾಪಸ್ಸು ಬಂದರೇ ಸಾಕಪ್ಪ ಅಂತ ಕಾದರು.
ಬೆಂಗಳೂರಿನಲ್ಲಿ ಹಿಂದೂ ಮುಸ್ಲಿಂ ಗಲಾಟೆ ಆಗಿದೆ ಅಂತ ನಂಗೂ ಹತ್ತಾರು ಪೋನುಗಳು ಬಂದವು ನನಗೂ ಏನೂ ಆಗಿಲ್ಲಾ ಕಣ್ರಯ್ಯಾ ಅಂತ ಕನ್ವಿನ್ಸ್ ಮಾಡೋಕೆ ಸಾಕು ಬೇಕಾಯಿತು.
ಇಂತ ಸಂದರ್ಭಗಳಲ್ಲಿ ಘಟನಾ ಸ್ಥಳಕ್ಕೆ ಮೀಡಿಯಾದವರನ್ನು ಬಿಡಬಾರದು ಅನ್ನೋದು ನನ್ನ ಅಭಿಪ್ರಾಯ, ಹೋದರು ರಿಸ್ಟ್ರಿಕ್ಟೆಡ್ ವರದಿಗಾರಿಕೆಗೆ, ವಿಶುವಲ್ ಮತ್ತು ಪೋಟೋಗಳನ್ನ ಬಿಡುಗಡೆ ಮಾಡಬೇಕು ಅಂತ ಅನಿಸುತ್ತೇ, ಶ್ರೀ ಅವರು ನಂಬಿದಂತೆ ಟಿ.ವಿ.ನೈನ್ ಅವರು ಹೈಪ್ ಮಾಡಲು ನಿರ್ಧರಿಸಿದರೇ ಕೋಮುಗಲಭೆ ಹಬ್ಬುತ್ತಿತ್ತು ಅನ್ನೋದನ್ನು ನನಗೆ ಒಪ್ಪಿಕೊಳ್ಳೊಕ್ಕಾಗಲ್ಲಾ. ಮೈಸೂರು ಮಂಗಳೂರಿನಂತೆ ಇನ್ನೂ ಕೋಮುವಾದದ ಪ್ರಯೋಗಶಾಲೆ ಆಗಿಲ್ಲ, ಈಗ ಶುರುವಾಗಿದೆ ಅಷ್ಠೇ, ಅಲ್ಲಿನ್ನೂ ಪಜ್ಞಾವಂತರು ಇದ್ದಾರೆ ಅನ್ನೋದು ನನ್ನ ನಂಬಿಕೆ. ಮೈಸೂರು ಯಾವ ಕಾರಣಕ್ಕೂ ಮಂಗಳೂರು ಆಗದಿರಲಿ ಅನ್ನೋದು ನನ್ನ ಆಶಯ.
ಮೈಸೂರಿನಲ್ಲಿ ಮತ್ತೆ ಗಲಭೆ ಹಚ್ಚಿಸುತ್ತಾರೆ ಆಗಲೂ ನಮ್ಮ ಮೀಡಿಯೂದವರು, ಪ್ರಭುದ್ದತೆಯಿಂದ ವರ್ತಿಸಿದರೇ ನೋಡೋಣ.
ಶ್ರೀ Comment by ಶ್ರೀ on July 10, 2009 at 10:16pm
ಮಥುರಾ ಯಾತ್ರಿಗಳ ಸಾವು ಬುದ್ಧಿಪೂರ್ವಕವಾಗಿಯೇ ತಡೆಹಿಡಿಯಲ್ಪಟ್ಟ ಸುದ್ದಿ. ಮೈಸೂರಿದು ಕೂಡ ಅಷ್ಟೇ, ಎಡಿಟೋರಿಯಲ್ ಮೀಟಿಂಗಲ್ಲಿ ತೆಗೆದುಕೊಂಡ ನಿರ್ಧಾರವಂತೆ. ಹುಕ್ಕೇರಿ ಗಲಭೆಯ ದೃಶ್ಯಾವಳಿಗಳು ಚಿತ್ರೀಕರಿಸಲ್ಪಟ್ಟಿವೆ, ಆದರೆ ಪೂರ್ತಿಯಾಗಿ ಯಾವುದೇ ವಾಹಿನಿಯಲ್ಲಿ ಪ್ರಸಾರವಾಗಿಲ್ಲ. ಒಳ್ಳೆಯದೇ ಆಗಿದೆ ಎಂಬುದು ನಿಜ, ಅದಕ್ಕೆ ಹಂಚಿಕೊಳ್ಳೋಣವೆನಿಸಿತು.
G M Kotresh Comment by G M Kotresh on July 10, 2009 at 2:15am
ನಿಯಮಾವಳಿ ಪಾಲನೆ ದೃಷ್ಟಿಯಿಂದಲೇ ಈ ಸುದ್ದಿಗಳಿಗೆ ಮಾಧ್ಯಮಗಳು ಮಹತ್ವ ಕೊಡಲಿಲ್ಲ ಅನ್ನುವಿರಾ? ನನಗೇಕೋ ಅದರಲ್ಲಿ ಅನುಮಾನ. ಮಥುರಾದಿಂದ ಯಾತ್ರಿಗಳ ಸಾವು ಯಾವುದೋ ಕಾರಣಕ್ಕೆ ಪ್ರಮುಖ ಸುದ್ದಿಯಲ್ಲ ಅನ್ನಿಸಿರಬಹುದು. ದೃಷ್ಯಗಳ ಸೆರೆಹಿಡಿಯಲು ಇದ್ದ ಆಡಚಣೆಯೇ ಬೆಳಗಾವಿಯ ಹುಕ್ಕೇರಿ ಘಟನೆ ದೃಶ್ಯ ಮಾಧ್ಯಮದಲ್ಲಿ ಮಹತ್ವ ಪಡೆಯದಿರಲು ಕಾರಣವಿರಬಹುದು. ಮೈಸೂರು ಘಟನೆಯ ಸ್ಪಷ್ಟ ಚಿತ್ರಣ ಸಿಗಲಿ ಎಂದು ಮಾಧ್ಯಮಗಳು ತಡ ಮಾಡಿರಬಹುದು. ನಿಯಮಾವಳಿ ಪಾಲನೆ ದೃಷ್ಟಿಯಿಂದ ಉದ್ದೇಶಪೂರ್ವಕವಾಗಿಯೇ ಮಾಧ್ಯಮಗಳು ಈ ನಿರ್ಧಾರ ತೆಗೆದುಕೊಂಡಿವೆ ಎಂಬುದರಲ್ಲಿ ನನಗೇಕೋ ಅನುಮಾನ. ಏನೇ ಆಗಲಿ ನಿಯಮಾವಳಿ ಪಾಲನೆ ಆಗಿರುವುದು ಒಳ್ಳೆಯದೇ ಆಗಿದೆ ಬಿಡಿ.

About

madhyama madhyama created this Ning Network.

© 2009   Created by madhyama on Ning.   Create a Ning Network!

Badges  |  Report an Issue  |  Privacy  |  Terms of Service